ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತುಸಂಗ್ರಹಾಲಯವು ಬೆಂಗಳೂರಿನ ಒಂದು ಪ್ರಮುಖ ಪ್ರವಾಸಿ ಸ್ಥಳ ಹಾಗು ಭಾರತದ ಅತ್ಯುನ್ನತ ವಸ್ತುಸಂಗ್ರಹಾಲಯಗಳಲ್ಲಿ ಒಂದು. ಇದು ಭಾರತ ಸರ್ಕಾರದ 'ರಾಷ್ಟ್ರೀಯ ವೈಜ್ಞಾನಿಕ ಸಂಗ್ರಹಾಲಯಗಳ ಸಭಾ'ಗೆ ಸೇರಿದೆ. ಭಾರತ ಸರ್ಕಾರದ ಔದ್ಯೋಗಿಕ ಮತ್ತು ವೈಜ್ಞಾನಿಕ ಸಂಶೋಧನ ಮಂಡಲಿ ಆರಂಭಿಸಿದ ಎರಡು ವಸ್ತುಸಂಗ್ರಹಾಲಯಗಳಲ್ಲಿ ಇದು ಒಂದು. 1962ರಲ್ಲಿ ಇದನ್ನು ಮಂಡಲಿ ತನ್ನ ಸ್ವಾಧೀನಕ್ಕೆ ತೆಗೆದುಕೊಂಡಿತು. ಬೆಂಗಳೂರಿನ ಕಸ್ತೂರ್ಬಾ ರಸ್ತೆಯಲ್ಲಿ ಈ ಸಂಗ್ರಹಾಲಯದ ಕಟ್ಟಡವು ನಿಂತಿದೆ. ಕಬ್ಬನ್ ಉದ್ಯಾನವನ್ನು ಸೇರಿದಂತಯೇ ಇದೆ. ವಿಶ್ವೇಶ್ವರಯ್ಯರವರ ಜನ್ಮ ಶತಾಬ್ದಿ ಆಚರಣೆಯ ಅಂಗವಾಗಿ ೧೯೬೨ ಇಸವಿಯಲ್ಲಿ ಇದನ್ನು ಸ್ಥಾಪಿಸಲಾಯಿತು. ಅಂದಿನಿಂದ ಇಲ್ಲಿಯವರಗೆ ಈ ಸಂಗ್ರಹಾಲಯವು ಮಕ್ಕಳ ಶಿಕ್ಷಣ ಪ್ರವಾಸಗಳಿಗೆ ನೆರವಾಗಿದೆ. ಪ್ರತಿ ವರುಷ ಈ ಸಂಗ್ರಹಾಲಯಕ್ಕೆ ಹತ್ತು ಲಕ್ಷ ಜನ ಬರುತ್ತಾರೆ ಎಂದು ಹೇಳಲಾಗಿದೆ. ಈ ಕಟ್ಟಡವನ್ನು ಕಬ್ಬನ್ ಪಾರ್ಕ್ ನ ೪೦೦೦ ಮೀ ಚದರಡಿ ಪ್ರದೇಶದಲ್ಲಿ ನಿರ್ಮಿಸಲಾಯಿತು. ವಿವಿಧ ವೈಜ್ಞಾನಿಕ ಪ್ರಯೋಗಗಳನ್ನು ಮತ್ತು ಎಂಜಿನ್‍ಗಳನ್ನು ಇದು ಒಳಗೊಂಡಿದೆ. ಭಾರತದ ಮೊದಲ ಪ್ರಧಾನಿ, ಪಂಡಿತ್ ಜವಾಹರಲಾಲ್ ನೆಹರೂ ರವರು ೧೪ನೇ ಜುಲೈ ೧೯೬೨ ರಂದು ಇದನ್ನು ಪ್ರಾರಂಭಿಸಿದರು. ಈ ಸಂಗ್ರಹಾಲಯದಲ್ಲಿ ನಾಲ್ಕು ವ್ಯವಸ್ಥಾವೇದಿಕೆಗಳಿವೆ (ಗ್ಯಾಲರಿ): 1 ಎಲೆಕ್ಟ್ರೋಟೆಕ್ನಿಕ್, 2 ಮೋಟೀವ್ ಪವರ್, 3 ಪಾಪ್ಯುಲರ್ ಸೈನ್ಸ್, 4 ಟಿಂಬರ್ ಅಂಡ್ ಪೇಪರ್. ಈ ಸಂಸ್ಥೆ ಸಂಚಾರ ಸಂಗ್ರಹಾಲಯವನ್ನು ವ್ಯವಸ್ಥೆಗೊಳಿಸಿ ರಾಜ್ಯದ ವಿವಿಧ ಭಾಗಗಳಲ್ಲಿ ಪ್ರದರ್ಶನ ಏರ್ಪಡಿಸುತ್ತದೆ. ಸಂಗ್ರಹಾಲಯದ ಮೊದಲ ಗ್ಯಾಲರಿ 'ಎಲೆಕ್ಟ್ರಿಸಿಟಿ' ವಿಷಯದ ಮೇಲೆ ಸಾರ್ವಜನಿಕರಿಗೆ ೨೭ ಜುಲೈ ೧೯೬೫ ರಂದು ತೆರೆಯಲಾಯಿತು. == ಉದ್ದೇಶಗಳು == ಇದರ ಪ್ರಧಾನ ಉದ್ದೇಶಗಳು ಹೀಗಿವೆ: ವಿಜ್ಞಾನ, ತಂತ್ರಜ್ಞಾನ ಮತ್ತು ಉದ್ಯೋಗ ಈ ಕ್ಷೇತ್ರಗಳಲ್ಲಿ ಆಗಿರುವ ಪ್ರಗತಿಯನ್ನು ಪ್ರತಿನಿಧಿಸುವಂಥ ಚಾರಿತ್ರಿಕ ವಸ್ತುಗಳ ಸಂಗ್ರಹ, ರಕ್ಷಣೆ ಮತ್ತು ಪಾಲನೆ. ಉದ್ಯೋಗ ಮತ್ತು ಮಾನವ ಕಲ್ಯಾಣ ಕಾರ್ಯಕ್ಕೆ ಸಂಬಂಧಿಸಿದ ವೈಜ್ಞಾನಿಕ ಮತ್ತು ತಾಂತ್ರಿಕ ಕ್ಷೇತ್ರದಲ್ಲಿ ಆಗಿರುವ ಬೆಳೆವಣಿಗೆಯನ್ನು ಸೂಚಿಸುವುದು. ವಿದ್ಯಾರ್ಥಿಗಳು ಹಾಗೂ ಜನಸಾಮಾನ್ಯರ ಉಪಯೋಗಕ್ಕಾಗಿ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಜನಪ್ರಿಯಗೊಳಿಸುವುದು. ಶಾಲಾಕಾಲೇಜುಗಳಲ್ಲಿ ನೀಡಿರುವ ವಿಜ್ಞಾನ ಶಿಕ್ಷಣಕ್ಕೆ ಪೂರಕವಾಗುವಂತೆ ಪ್ರಸಾರ ವ್ಯವಸ್ಥೆ ಮಾಡುವುದು. ವಿದ್ಯಾರ್ಥಿಗಳಿಗೆ ವಿಜ್ಞಾನ ಶಿಕ್ಷಣವನ್ನು ಪರಿಣಾಮಕಾರಿಯಾಗಿ ನೀಡಲು ವೈಜ್ಞಾನಿಕ ಪಾಠೋಪಕರಣಗಳನ್ನು ಉತ್ತಮಪಡಿಸುವುದಕ್ಕೂ ಬಳಸುವುದಕ್ಕೂ ಅಧ್ಯಾಪಕರಿಗೆ ತರಬೇತು ನೀಡುವುದು. ಶಾಲಾಕಾಲೇಜುಗಳಲ್ಲೂ ಇತರ ಸಂಸ್ಥೆಗಳಲ್ಲೂ ವಿಜ್ಞಾನ ವಸ್ತು ಸಂಗ್ರಹಾಲಯಗಳ ಸ್ಥಾಪನೆಗೆ ಎಲ್ಲ ರೀತಿಯ ಅನುಕೂಲಗಳನ್ನು ಒದಗಿಸುವುದು ಮತ್ತು ವಸ್ತುಸಂಗ್ರಹಾಲಯದ ಕಾರ್ಯಸಿಬ್ಬಂದಿಗೆ ತರಬೇತು ನೀಡುವುದು. ಭಾರತಕ್ಕೆ ಸಂಬಂಧಿಸಿದಂತೆ ವಿಜ್ಞಾನ ಮತ್ತು ತಂತ್ರಶಾಸ್ತ್ರದ ಇತಿಹಾಸವನ್ನು ಕುರಿತಂತೆ ಸಂಶೋಧನೆ ನಡೆಸುವುದು. ವಿಜ್ಞಾನ ಶಿಕ್ಷಣವನ್ನು ಉತ್ತಮಪಡಿಸಲು ಆ ಕಾರ್ಯಕ್ಕೆ ಬೇಕಾದ ಸಲಕರಣೆಗಳನ್ನು ಪೀಠೋಪಕರಣಗಳನ್ನು ನಿಯೋಜಿಸಿ ತಯಾರಿಸುವುದು. ಮೇಲಿನ ಉದ್ದೇಶಗಳಿಗನುಗುಣವಾಗಿ ಈ ಸಂಗ್ರಹಾಲಯ ಕರ್ನಾಟಕದ ಬೇರೆ ಬೇರೆ ವಿಭಾಗಗಳಲ್ಲಿ ಪ್ರದರ್ಶನಗಳನ್ನು ಏರ್ಪಡಿಸಿ ವಿದ್ಯಾರ್ಥಿಗಳಿಗೂ ಅಧ್ಯಾಪಕರಿಗೂ ಜನಸಾಮಾನ್ಯರಿಗೂ ವಿಜ್ಞಾನದ ಪ್ರಗತಿಯ ಬಗ್ಗೆ ಪರಿಚಯ ಮಾಡಿಕೊಡುತ್ತಿದೆ. ಶಾಲಾಕಾಲೇಜುಗಳಲ್ಲಿ ವಿಜ್ಞಾನಶಿಕ್ಷಣವನ್ನು ಸಂವರ್ಧಿಸಲು ಈ ಸಂಗ್ರಹಾಲಯ ಕಾರ್ಯಕ್ರಮ ಗಳನ್ನು ಹಾಕಿಕೊಂಡಿದೆ. == ಛಾಯಾಂಕಣ == == ಉಲ್ಲೇಖಗಳು == == ಹೊರಗಿನ ಕೊಂಡಿಗಳು ==